ವಿಷ್ಣು ಸಹಸ್ರ ನಾಮ - ಪ್ರತಿಯೊಂದು ನಾಮದ ವಿವರಣೆ.
ಅಪ್ರಮೇಯೋ ಹೃಷೀಕೇಶ: ಪದ್ಮನಾಭೋಮರಪ್ರಭುಃ | ವಿಶ್ವಕರ್ಮಾ ಮನುಸ್ತ್ರಷ್ಟಾ ಸ್ಥವಿಷ್ಠಃ ಸ್ಥವಿರೋಧ್ರುವಃ ||೬ ||
ವಿಷ್ಣು ಸಹಸ್ರ ನಾಮ - ಪ್ರತಿಯೊಂದು ನಾಮದ ವಿವರಣೆ.
ಇಂದಿನ ನಾಮ
ವಿಷ್ಣು ಸಹಸ್ರ ನಾಮ - ಪ್ರತಿಯೊಂದು ನಾಮದ ವಿವರಣೆ
೪೬. ಅಪ್ರಮೇಯಃ - ಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವಾಗದವನು. ..
ವಿವರಣೆ : ಪರಮಾತ್ಮನನ್ನು ನಖಶಿಖಾಂತ ತಿಳಿದುಕೊಳ್ಳಲು ಸಾಧ್ಯವಿಲ್ಲ. ಯಾರೂ ನಾನು ದೇವರನ್ನು ಪೂರ್ಣವಾಗಿ ಬಲ್ಲವನಾಗಿದ್ದೇನೆ ಎಂದು ಹೇಳುವವರಿಲ್ಲ. 'ಮೇಯ' 'ಪ್ರಮೇಯ'- ಅಪ್ರಮೇಯ, ಮೇಯ ಎಂದರೆ ತಿಳಿದುಕೊಳ್ಳಲು ಯೋಗ್ಯ. ಪ್ರಮೇಯ ಚೆನ್ನಾಗಿ ತಿಳಿದುಕೊಳ್ಳಲು ಯೋಗ್ಯ, ಅಪ್ರಮೇಯ ಎಂದರೆ ಸಮಗ್ರವಾಗಿ ಯಾರನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲವೋ ಅಂತಹವನು.
ಕುರುಡರು ಆನೆಯನ್ನು ಪರಿಚಿಯಿಸಿಕೊಂಡಂತೆಯೋ ಏನೋ ನಮಗೆ ನಿಮಗೆ ಭಗವಂತನ ಪರಿಚಯ. ನಾವು ಬಿಡಿ, ಲಕ್ಷ್ಮೀಯೇ ದೇವರನ್ನು ಸಮಗ್ರವಾಗಿ ತಿಳಿದುಕೊಂಡಿಲ್ಲ. ದಾಸರು ಅಂದರು 'ಬಗೆ ಬಗೆಯ ನೂತನವ ಕಾಣುತ ಮಿಗೆ ಹರುಷದಿಂ ಪೊಗಳುತಿಪ್ಪುದು ತ್ರಿಗುಣಮಾನಿ ಮಹಾಲಕುಮಿ ಸಂತೈಸಲನುದಿನವು" ಹೀಗೆ ಲಕ್ಷ್ಮೀದೇವಿ ಪ್ರತಿನಿತ್ಯ ಬಗೆ ಬಗೆಯ ನೂತನವನ್ನು ತನ್ನ ಪತಿಯಲ್ಲಿ ಕಾಣುತ್ತಿದ್ದಾಳೆ ಎಂದರೆ ಈಗಾಗಲೇ ಸಮಗ್ರವಾಗಿ ಅವನನ್ನು ತಿಳಿಯಲಿಲ್ಲ ಎಂಬುದು ಸ್ಪಷ್ಟ, ಲಕ್ಷ್ಮೀದೇವಿಗೇ ಪೂರ್ಣವಾಗಿ ತಿಳಿದುಕೊಳ್ಳಲಾಗಲಿಲ್ಲ ಎಂದರೆ ನಮಗೆ ಅವನನ್ನು ಹೇಗೆ ಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವಾದೀತು?
ಆದ್ದರಿಂದ ಯಾರ ಮುಂದೆಯೂ ತನ್ನನ್ನು ಪೂರ್ಣವಾಗಿ ತೆರೆದು ಇಡದೆ ಇರುವುದೇ ದೇವರ ದೊಡ್ಡ ಗುಣ. ಯಾರಿಗೂ ಸಮಗ್ರವಾಗಿ ಅರ್ಥವಾಗದಂತೆ ಇರುವಿಕೆಯೇ ಭಗವಂತನ ಗುಣ. ಎಷ್ಟು ಕೆದಕಿದರೂ ತನ್ನ ಪೂರ್ಣ ಗುಟ್ಟನ್ನು ಬಿಟ್ಟು ಕೊಟ್ಟಿಲ್ಲ - ಎಂದು ನಾವು ಲೋಕದ ಸಾಮಾನ್ಯ ಜನರ ಬಗ್ಗೆ ಹೇಳುವುದಿದೆ. ಹೀಗಿರುವಾಗ ಅನಂತ ಕಲ್ಯಾಣ ಗುಣ ಪರಿಪೂರ್ಣನಾದ ಭಗವಂತನ ಪೂರ್ಣ ಗುಟ್ಟು ಬಿಟ್ಟು ಕೊಡಲ್ಪಟ್ಟತೇ ? ಶ್ರೀ ಕೃಷ್ಣನಲ್ಲಿ ಭೀಷ್ಮರು ಅನ್ನುವರು - ಎಂಟು ನೂರು ವರ್ಷಗಳಾದರೂ ಒಂದನ್ನು ಚೆನ್ನಾಗಿ ತಿಳಿದುಕೊಳ್ಳಲಾಗಲೇ ಇಲ್ಲ. ಅದು ಮತ್ತಾವುದೂ ಅಲ್ಲ, 'ನೀನೇ', ಕೃಷ್ಣ ಮುಗುಳ್ನಕ್ಕು ಅನುಗ್ರಹಿಸಿದೆ.
No comments:
Post a Comment