ಇತ್ತೀಚಿನ ದಿನಗಳಲ್ಲಿ "ಉದ್ಯೋಗಮ್ ಸ್ತ್ರೀ ಲಕ್ಷಣಮ್" ಎನ್ನುವ ಮಟ್ಟಿಗೆ ಸ್ತ್ರೀ ಯರಿಗೆ ಉದ್ಯೋಗ ವಿಲ್ಲದಿದ್ದರೆ ಗೌರವವೇ ಇಲ್ಲದಂತಹ ಪರಿಸ್ಥಿತಿ ಮನೆಮಾಡಿದೆ ಎಂದರೆ ಭಾರತ ನಿಜವಾಗಿಯೂ ಜ್ಞಾನಿಗಳ ದೇಶವೋ ಅಜ್ಞಾನಿಗಳ ದೇಶವೋ ಎಂದು ಪ್ರಶ್ನೆ ಏಳುತ್ತದೆ.
ಪರೀಕ್ಷೆಗಳಲ್ಲಿ ಹೆಚ್ಚಾಗಿ ಹೆಣ್ಣುಮಕ್ಕಳು ಮೇಲುಗೈ ಸಾಧಿಸುವುದರಿಂದ ಅರ್ಥ ವಾಗುತ್ತದೆ ಹೆಣ್ಣು ಬುದ್ದಿವಂತೆ ಜೊತೆಗೆ ಜ್ಞಾನ ದೇವತೆಯೂ ಆಗಿರುವಳು.
ಹಿಂದಿನ ಕಾಲದಲ್ಲಿದ್ದಂತೆ ಹೆಣ್ಣಿಗೆ ಶಿಕ್ಷಣ ಕೊಡದೆ ನಾಲ್ಕು ಗೋಡೆಯೊಳಗೆ ಬಂಧನ ದಲ್ಲಿಡುವವರು ಕಡಿಮೆ. ವಿದ್ಯೆ ಬುದ್ದಿ ಜ್ಞಾನ ಬಂದ ಮೇಲೆ ಹಣ ಸಂಪಾದನೆಯೂ ಅವಳೇ ಮಾಡುವಳೆಂದರೆ ಗಂಡಿನ ಕೆಲಸವೇನು?
ಭೂಮಿಯ ಋಣ ತೀರಿಸಲು ಜನ್ಮ ಪಡೆದ ಜೀವಾತ್ಮನಿಗೆ ಮುಕ್ತಿ ಸಿಗಬೇಕಾದರೆ ಭೂ ಸೇವೆ ಅಗತ್ಯವೆಂದರು. ಸಂಸಾರಕ್ಕೆ ಬಂದ ಮೇಲೆ ತಾಯಿ ತಂದೆ ಬಂಧು ಬಳಗ ಪತ್ನಿ ಪುತ್ರರನ್ನು ಒಂದು ಮಾಡೋದಕ್ಕೆ ತತ್ವಜ್ಞಾನ ಅಗತ್ಯವಿದೆ.
ಇದರಲ್ಲಿ ಸ್ತ್ರೀ ಋಣ ತಾಯಿ ಋಣ ತೀರಿಸಲು ಗಂಡು ಧರ್ಮ ಮಾರ್ಗದಲ್ಲಿ ನಡೆದು ದುಡಿದು ಸಂಪಾದಿಸಿದ ಹಣವನ್ನು ಸದ್ಬಳಕೆ ಮಾಡಲು ಜ್ಞಾನ ಅಗತ್ಯವಿದೆ. ಹೊರಗಿನ ವಿದ್ಯೆ ಇಂದು ಹಣಕ್ಕಾಗಿ ಕಲಿಯುವಂತಾಗಿದ್ದರೂ ಅದರೊಂದಿಗೆ ಅಧ್ಯಾತ್ಮಿಕ ಸತ್ಯಜ್ಞಾನವನರಿತು ತನ್ನ ನಂಬಿ ಬಂದಿರುವ ಹೆಣ್ಣಿನ ಗುಣಜ್ಞಾನವನ್ನು ಗೌರವಿಸಿ ಮನೆಲಕ್ಮಿಯ ಸ್ಥಾನಕೊಟ್ಟು ಗೃಹಮಂತ್ರಿಯ ಅಧಿಕಾರ ಕೊಟ್ಟವರು ಎಲ್ಲಿರುವರು? ಹೆಣ್ಣು ಯಾವ ಕೆಲಸದಲ್ಲಿರೋದು? ಏನು ಓದಿರೋದು? ನೋಡಲು ಚೆನ್ನಾಗಿರುವಳೆ? ಉತ್ತಮ ಗುಣವಂತಳೆ? ಹೆಣ್ಣಿನ ಮನೆತನ ಎಂತದ್ದು....ಹೀಗೇ ಪಟ್ಟಿ ಇಟ್ಟು ಹುಡುಗಿಯನ್ನು ಮದುವೆ ಆಗೋರು ಬಹಳ.
ಅಧ್ಯಾತ್ಮ ದ ಪ್ರಕಾರ ಇವೆಲ್ಲವೂ ಗಂಡಿನಲ್ಲಿದ್ದರಷ್ಟೆ ನಿಜವಾದ ಜೀವನವಾಗುತ್ತದೆ. ಉತ್ತಮ ಸಂಸ್ಕಾರ ಸಂಪಾದನೆ ಗುಣಧರ್ಮ ವಿದ್ದ ಗಂಡು ಮಾತ್ರ ಹೆಣ್ಣಿನ ಪವಿತ್ರತೆ ಗುಣಕ್ಕೆ ಗೌರವಿಸಿ ಅವಳನ್ನು ಗೃಹಿಣಿಯಾಗಿ ಸುಖವಾಗಿರಿಸಲು ಸಾಧ್ಯ. ಯಾವಾಗ ನಿರೀಕ್ಷೆಗಳು ಭೌತಿಕಾಸಕ್ತಿಯ ಕಡೆಗೆ ಹೋಗುವುದೋ ಆಗ ಇಬ್ಬರೂ ದುಡಿದರೂ ನೆಮ್ಮದಿ ಶಾಂತಿ ತೃಪ್ತಿ ಸಿಗದೆ ಜೀವನದ ರಹಸ್ಯ ಅರ್ಥ ವಾಗದೆ ಜೀವ ಹೋಗುತ್ತದೆ.
ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂದು ಹಿಂದೆ ಹೆಣ್ಣಿನ ಕಷ್ಟ ನೋಡಿಯೂ ನೋಡದಂತೆ ತವರುಮನೆಯವರು ಇದ್ದರು.ಆದರೆ ಆ ಹೆಣ್ಣಿನ ಸಂಕಟವೇ ಇಂದಿಗೂ ಭೂಮಿಯಲ್ಲಿ ಮಾರಿಯ ರೂಪದಲ್ಲಿ ನಿಂತಿದೆ. ಜೀವ ಕೊಟ್ಟರೆ ಸಾಲದು ಜೀವನಕೊಟ್ಟರೂ ಮುಗಿಯದು.ಜೀವಾತ್ಮನಿಗೆ ಸರಿಯಾದ ಗೌರವ ಅದರ ಮುಖ್ಯ.ಇದರಲ್ಲಿ ಲಿಂಗಬೇಧ,ಧರ್ಮ ಬೇಧ ಜಾತಿ ಬೇಧ ಎಬ್ಬಿಸಿ ತನ್ನೊಳಗೆ ಇರುವ ಅಜ್ಞಾನವನ್ನು ಬೆಳೆಸಿದರೆ ಹಣವೇ ಸರ್ವಸ್ವ ವೆನಿಸುತ್ತಾ ಹೆಣ್ಣು ತನ್ನ ಜೀವರಕ್ಷಣೆಗೆ ತಾನೇ ದುಡಿದು ಬದುಕಲು ಹೊರಗೆ ಹೊರಡುವಳು.
ಆದರೆ ಇದರಿಂದ ಗಂಡಿನ ಭೂ ಸಾಲ ಹೆಣ್ಣಿನ ಋಣ ತೀರದೆ ಇನ್ನಷ್ಟು ಕೆಳಗೆ ಹುಟ್ಟುವುದು ವಿಧಿ ಲಿಖಿತವಾಗುತ್ತದೆ.
ಯಾರಿಗೆ ಗೊತ್ತು ಯಾವ ಜನ್ಮದಲ್ಲಿ ಯಾವ ಲಿಂಗದಲ್ಲಿದ್ದು ಯಾರ ಋಣ ತೀರಿಸಬೇಕಿದೆಯೋ.ಒಟ್ಟಿನಲ್ಲಿ ಋಣ ತೀರಿಸಲು ಸುಜ್ಞಾನ ಅಗತ್ಯವಿದೆ. ಅಧ್ಯಾತ್ಮ ವಿದ್ಯೆಯ ನಂತರ ಭೌತಿಕ ವಿದ್ಯೆ ಪಡೆದರೆ ಇಬ್ಬರೂ ಸರಿಸಮಾನರು. ಇದರಲ್ಲಿ ಯಾರನ್ನು ಯಾರೂ ಆಳೂ ಅಲ್ಲ ಅರಸರೂ ಅಲ್ಲ. ಹೊಂದಿಕೊಂಡು ಬಾಳುವ ಗುಣವಿದ್ದರೆ ಸಾವಿರದಲ್ಲೂ ಸಂಸಾರಸುಖ,ಇಲ್ಲದಿದ್ದರೆ ಕೋಟಿ ಇದ್ದರೂ ವ್ಯರ್ಥ.
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ ...ಅಂದರೆ ಹೆಣ್ಣು ಹೊರಗೆ ಹೊರಟರೆ ಆಸೆ ಆಕಾಂಕ್ಷೆಗಳು ಬೆಳೆಯುತ್ತದೆ.ದುಡಿದು ತಂದರಂತೂ ಮಿತಿಇರದು. ಮನೆಯೊಳಗೆ ಕೆಲಸದ ಜೊತೆಗೆ ಧಾರ್ಮಿಕ ಪೂಜೆ ಕಾರ್ಯ ನಡೆಯದು. ಹೀಗಾಗಿ ಸಂಸ್ಕಾರರಹಿತ ಸಂಸಾರದಲ್ಲಿ ಸುಖ ಶಾಂತಿ ಕಡಿಮೆಯಿರುತ್ತದೆ. ಹೊರಗಿನ ಉಡುಗೆ ತೊಡುಗೆ ಊಟ ಪ್ರವಾಸಗಳಲ್ಲಿಯೇ ಹಣ ಕಳೆದು ಸಾಲ ಮಾಡಿಯಾದರೂ ಜೀವನನಡೆಸುವರು. ಇದರ ಜೊತೆಗೆ ಅನಾರೋಗ್ಯ ಅತೃಪ್ತಿ ಅಶಾಂತಿಯಿಂದ ಎಷ್ಟು ಹಣಗಳಿಸಿ ಉಪಯೋಗವಿಲ್ಲ.
ಆದರೆ ಇತ್ತೀಚಿನ ದಿನಗಳಲ್ಲಿ ಜೀವನದ ಭದ್ರತೆಯು ಹಣದಿಂದ ನಡೆದಿರುವಾಗ ಯಾರೂ ಇಲ್ಲದ ಪರಿಸ್ಥಿತಿಯಲ್ಲಿ ಸ್ತ್ರೀ ಸ್ವತಂತ್ರ ವಾಗಿ ಜೀವನನಡೆಸುವಷ್ಟು ವಿದ್ಯೆಯ ಜೊತೆಗೆ ಜ್ಞಾನವನ್ನು ಪಡೆದಿರುವುದರಿಂದ ನಿಜವಾದ ಸಂಸಾರ ಸ್ತ್ರೀ ನಡೆಸಿರುವುದು ಹೆಚ್ಚಾಗಿದೆ.ಹೀಗಾಗಿ ಗಂಡುಮಕ್ಕಳು ಸ್ವೇಚ್ಚಾಚಾರಕ್ಕೆ ಇಳಿದು ಸಮಾಜ ಘಾತುಕಕಾರ್ಯಕ್ಕೆ ಇಳಿದಿರೋದು ಹೆಚ್ಚು. ಪುರುಷ ಮಾಡಬೇಕಾದ ಕೆಲಸ ಮಹಿಳೆ ಮಾಡಿಮುಗಿಸಿದರೆ ಕೆಲಸವಿಲ್ಲದೆ ಅಲೆಯುವವರು ಪುರುಷರೆ ಆದಾಗ ತಮ್ಮ ಆತ್ಮರಕ್ಷಣೆ ಮಾಡಿಕೊಳ್ಳುವ ಆತ್ಮಜ್ಞಾನದ ಕೊರತೆ ಗಂಡಿಗೆ ಹೆಚ್ಚಾಗಿರೋದು ಭಾರತ ದೇಶದ ಈ ಸ್ಥಿತಿಗೆ ಕಾರಣ. ರಾಜಕೀಯ ಕ್ಷೇತ್ರದಿಂದ ಹಿಡಿದು ಸಾಮಾಜಿಕ ಕ್ಷೇತ್ರದಲ್ಲಿ ಸ್ತ್ರೀ ಮೇಲುಗೈ ಸಾಧಿಸಿ ಧಾರ್ಮಿಕವಾಗಿ ಹಿಂದುಳಿದರೆ ಯಾರಿಗೆ ನಷ್ಟ?
ವಿಶ್ವ ಗುರು ಭಾರತದ ಜ್ಞಾನಸಂಪತ್ತನ್ನು ಮರೆತು ಹಣಕ್ಕಾಗಿ ಹೊರಗೆ ಹೊರಟವರು ಶ್ರೀಮಂತ ರಾಗಬಹುದು.ಆದರೆ ಆ ಹಣಯಾವ ರೀತಿಯಲ್ಲಿ ಬಳಕೆಯಾಗುತ್ತಿದೆ ಹೆಣ್ಣನ್ನು ಹೇಗೆ ಬಳಸಿಕೊಂಡು ಮನರಂಜನೆ ನಡೆದಿದೆ.ಭೂಮಿಯಲ್ಲಿ ಧರ್ಮ ಸತ್ಯ ತತ್ವ ಸತ್ವ ಎಷ್ಟು ಮರೆಯಾಗುತ್ತಿದೆ ಎನ್ನುವ ಬಗ್ಗೆ ಚರ್ಚೆ ನಡೆಸದೆ ಎಲ್ಲದ್ದಕ್ಕೂ ಕಾರಣ ಸ್ತ್ರೀ ಎಂದರೆ ಅವಳನ್ನು ಅಜ್ಞಾನದೆಡೆಗೆ ನಡೆಸಿದವರೆ ನಿಜವಾದ ಕಾರಣಕರ್ತರಾಗುವರು. ಇದು ಎಲ್ಲಾ ಧಾರ್ಮಿಕ ಗುರುಹಿರಿಯರು ಅರ್ಥ ಮಾಡಿಕೊಂಡರೆ ಸ್ತ್ರೀ ಯಾವತ್ತೂ ಪವಿತ್ರಳೆ ಆಗಿದ್ದರೂ ಅವಳನ್ನು ನೋಡುವ ದೃಷ್ಟಿ ಅಪವಿತ್ರ ಆಗಿರುವಾಗ ಇದರ ಹೊಣೆಗಾರರು ಯಾರು? ಈಗಲೂ ಎಷ್ಟೋ ಸ್ತ್ರೀ ಯರಿಗೆ ಸಾಕಷ್ಟು ಆಸ್ತಿ ಹಣವಿದ್ದರೂ ಮನೆಯಲ್ಲಿ ಗೌರವ ಸಿಗದೆ ಹೊರಗೆ ದುಡಿಯಲು ಹೊರಟಿರುವುದನ್ನು ನೋಡಿದರೆ ಮನುಕುಲ ಎತ್ತ ಸಾಗಿದೆ?
ಭೂಮಿಯ ಋಣ ತೀರಿಸಲು ಬಂದವರು ಇನ್ನಷ್ಟು ದುಡಿಸಿಕೊಂಡು ಸಾಲ ತಲೆಮೇಲೆ ಹಾಕಿಕೊಂಡರೆ ಜನ್ಮಜನ್ಮದವರೆಗೂ ತೀರಿಸಲೇಬೇಕು. ಹಿಂದಿನ ಜನ್ಮದ ಗಂಡು ಈ ಜನ್ಮದ ಹೆಣ್ಣಾಗಬಹುದು.ಹಾಗೆ ಹೆಣ್ಣು ಗಂಡಾಗಬಹುದು. ಆತ್ಮಕ್ಕೆ ಲಿಂಗ ಬೇಧವಿರದು.ಅವರವರ ಸಾಲ ಅವರೆ ದುಡಿದು ತೀರಿಸಬೇಕೆನ್ನುತ್ತದೆ ಸನಾತನಧರ್ಮ.
ಸೋಮಾರಿತನ ಇಬ್ಬರಿಗೂ ಸಮಸ್ಯೆ ತರುತ್ತದೆ. ಮನೆಯೊಳಗೆ ಹೊರಗೆ ಸನ್ಮಾರ್ಗದಲ್ಲಿನಡೆದರಷ್ಟೆ ಧರ್ಮ ಜ್ಞಾನ. ಜ್ಞಾನದಿಂದ ಮುಕ್ತಿ ಆತ್ಮತೃಪ್ತಿಯಿಂದಮೋಕ್ಷ. ಮೋಕ್ಷ ಎಂದರೆ ಮೋಹದಕ್ಷಯ.ಮೋಹಮಾಯೆಯ ವಶದಲ್ಲಿರುವ ಜೀವಾತ್ಮನಿಗೆ ತನ್ನ ತಾನರಿತು ನಡೆಯೋದಕ್ಕೆ ಸ್ವತಂತ್ರ ಜ್ಞಾನ ಅಗತ್ಯವಿದೆ. ಹಣ ಒಂದು ಮಾಧ್ಯಮವಷ್ಟೆ.ಇದನ್ನು ಸದ್ಬಳಕೆ ಮಾಡಿಕೊಳ್ಳುವ ಗುಣಜ್ಞಾನದ ಕೊರತೆ ಇಂದು ಹೆಚ್ಚಲು ಕಾರಣವೇ ಶಿಕ್ಷಣದ ವಿಷಯವಾಗಿದೆ. ಶಿಕ್ಷಣ ಜ್ಞಾನ ನೀಡದೆ ಬೆಳೆಸಿದರೆ ಹಣ ದುರ್ಭಳಕೆ ಆದಂತೆ ಜನ ಹೆಣ್ಣು ಹೊನ್ನು ಮಣ್ಣಿನ ದಾಸರಾಗೇ ಇರುವರು. ಕಲಿಗಾಲವಲ್ಲವೆ?
No comments:
Post a Comment