ಮಕ್ಕಳು ಯುವಪೀಳಿಗೆಯವರೆಗೂ ಹೃದಯಾಘಾತ ಹೆಚ್ಚಾಗುತ್ತಿದೆ ಎಂದರೆ ಹೃದಯವಂತಿಕೆ ಇಲ್ಲದ ಶಿಕ್ಷಣದ ಪ್ರಭಾವ ಎಂದರೆ ನಂಬದಿದ್ದರೂ ಇದೇ ಸತ್ಯ.
ಹಿಂದಿನ ಕಾಲದಲ್ಲಿಯೂ ಇಂತಹ ಹೃದಯಹೀನರಿದ್ದರು ಈಗಲೂ ಇದ್ದಾರೆ ಮುಂದೆಯೂ ಇರುವರು ಹೃದಯವನ್ನು ಕದ್ದು ಮಾರೋ ಸ್ಥಿತಿಗೆ ವಿಜ್ಞಾನ ಬೆಳೆದಿದೆ.ಆದರೆ ಅದರೊಳಗೆ ಇದ್ದ ಅಮೃತದಂತಹ ಗುಣಜ್ಞಾನದ ಕೊರತೆ ಹೃದಯವನ್ನು ಹಾಳು ಮಾಡುತ್ತಿದೆ. ಮಾನವನ ಹೃದಯಚಿಕಿತ್ಸೆ ಅಧ್ಯಾತ್ಮ ದಿಂದ ಮಾಡೋದಕ್ಕೆ ಸತ್ಯ ಜ್ಞಾನ ಅಗತ್ಯ.ದೈವೀಕ ಶಕ್ತಿಯನ್ನು ದುರ್ಭಳಕೆ ಮಾಡಿಕೊಂಡರೆ ಹೃದಯವಂತಿಕೆ ಬರೋದಿಲ್ಲ.ಮಕ್ಕಳು ದೇವರ ಸಮಾನ ಎಂದರು ಆದರೆ ಅವರಿಗೆ ಕೊಡುವ ಶಿಕ್ಷಣ ,ಆಹಾರ ವಿಷಯಗಳು ಯಾವ ಮಾರ್ಗ ಹಿಡಿದಿವೆ ಎಂದು ಪೋಷಕರು ಗಮನಿಸುವುದಕ್ಕೂ ಜ್ಞಾನವಿರಬೇಕಿದೆ.
ಪ್ರತಿಯೊಂದು ರಾಜಕೀಯದಿಂದ ಸರಿಪಡಿಸಲಾಗದು. ಹೀಗಾಗಿ ಅವರವರ ಒಳಗಿರುವ ಹೃದಯವನ್ನು ರಕ್ಷಣೆ ಮಾಡಿಕೊಂಡರೆ ಭಾರತ ನಿಜವಾದ ಜ್ಞಾನದ ಬೆಳಕಿನಲ್ಲಿರುವ ಹೃದಯವಂತ ಪ್ರಜೆಗಳನ್ನು ಕಾಣಬಹುದು.
ಕಲಿಕೆಯ ಪ್ರಭಾವ ಕಲಿಗಾಲವು ಕಲಿಸುತ್ತದೆ. ಜೀವನ ಎಂದರೆ ಜೀವಿಗಳ ವನ. ಜೀವವಿದ್ದರಷ್ಟೆ ಜೀವನ. ಜೀವ ಕೊಟ್ಟು ಜೀವನ ಕೊಟ್ಟಿರುವ ಪೋಷಕರು ಮಕ್ಕಳ ಹೃದಯವಂತಿಕೆ ಬೆಳೆಸುವ ಸುಜ್ಞಾನ ನೀಡುವುದು ಧರ್ಮ.
ಹಾಗಾದರೆ ಸುಜ್ಞಾನ ಎಲ್ಲಿದೆ? ಹೊರಗಿದೆಯೋ ಒಳಗಿದೆಯೋ?
ನಮ್ಮೊಳಗೇ ಅಡಗಿರುವ ಉತ್ತಮ ಗುಣವನ್ನು ಮಕ್ಕಳಿಗೆ ತಿಳಿಸಿ ಬೆಳೆಸಿ ಸಂಸ್ಕಾರದ ಕಡೆಗೆ ನಡೆದರೆ ಕಲ್ಮಶದಿಂದ ತನ್ನ ಕೆಲಸ ಮಾಡದ ಎಷ್ಟೋ ನರನಾಡಿಗಳು ಚುರುಕಾಗುತ್ತದೆ. ಹೃದಯವೂ ಉತ್ತಮವಾಗಿ ಕೆಲಸ ಮಾಡಿದಾಗ ಈ ಆಘಾತ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು.
ನಮಗೆ ಸಂಬಂಧ ಪಡದ ಅನಾವಶ್ಯಕ ನಕಾರಾತ್ಮಕ ವಿಷಯವಾಗಲಿ ವಸ್ತು ಒಡವೆ ಆಸ್ತಿಯಾಗಲಿ ದೇಹವನ್ನು ಅಶುದ್ದಗೊಳಿಸಿ ಅಸುರಿ ಶಕ್ತಿ ಬೆಳೆಯುತ್ತದೆ. ಅಸುರಿ ಶಕ್ತಿ ತನ್ನ ಸ್ವಾರ್ಥ ಅಹಂಕಾರ ಕ್ಕೆ ಪ್ರಚೋಧನೆ ನೀಡುತ್ತಾ ಹೃದಯವಂತಿಕೆ ಹಿಂದುಳಿದರೆ ಹೃದಯ ಸಂಬಂಧಿ ರೋಗ ಬರುತ್ತದೆ. ಇಷ್ಟೇ ಅಧ್ಯಾತ್ಮ. ವಿಜ್ಞಾನ ತಿಳಿಸೋದಲ್ಲವೆ?
ದೇವರ ಧರ್ಮ ಜಾತಿ ಪಕ್ಷ ಗಳ ಅಂತರದಲ್ಲಿ ಹೃದಯವಂತಿಕೆ ಮರೆಯಾಗುತ್ತದೆ ಎಂದರೆ ಎತ್ತ ಸಾಗಿದೆ ಮನುಕುಲ?
ಶಂಖದಿಂದ ಬಂದದ್ದೆಲ್ಲಾ ತೀರ್ಥ ವೆಂದರಿತು ದೈವತ್ವಮರೆತರೆ ತೀರ್ಥ ವೂ ಸ್ವಚ್ಚವಿರದು.
ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂದಿದ್ದು ಈಗ ಎಲ್ಲರೂಮಾಡೋದು ಓಟಿಗಾಗಿ ನೋಟು ಸೀಟಿಗಾಗಿ ಎನ್ನುವ ರಾಜಕೀಯಮಯವಾಗುತ್ತಿದೆ.ಯಾರನ್ನೂ ಯಾರೋ ಆಳಲು ಹೋಗಿ ಹೃದಯಹೀನರಾಗುತ್ತಿರೋದು ದುರಂತ.
No comments:
Post a Comment